ಗಿರಿನಗರದಲ್ಲಿ ಪುಟಾಣಿ ಮಕ್ಕಳ ಯಕ್ಷಗಾನ ಸಂಭ್ರಮ
ಲೇಖಕರು : ಪ್ರಸಾದ್ ಮೈರ್ಕಳ
ಶುಕ್ರವಾರ, ಸೆಪ್ಟೆ೦ಬರ್ 11 , 2015
|
ಸೆಪ್ಟೆ೦ಬರ್ 11, 2015
|
ಗಿರಿನಗರದಲ್ಲಿ ಪುಟಾಣಿ ಮಕ್ಕಳ ಯಕ್ಷಗಾನ ಸಂಭ್ರಮ
ಗಿರಿನಗರ :
ಕಾಸರಗೋಡು ಜಿಲ್ಲೆಯ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಯಕ್ಷ ಕಲಾವಿದರು ಬೆಂಗಳೂರಿನ ಗಿರಿನಗರದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಛಾತ್ರ ಚಾತುರ್ಮಾಸ್ಯದ ಸಂದರ್ಭದಲ್ಲಿ ಇತ್ತೀಚೆಗೆ ಯಕ್ಷಗಾನ ಪ್ರದರ್ಶನ ನೀಡಿದರು. ಪ್ರದರ್ಶನದ ಮೊದಲಿಗೆ ಪುಟಾಣಿ ಮಕ್ಕಳಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನಗೊಂಡಿತು. ವಿಷ್ಣುವಿನ ಪಾತ್ರದಲ್ಲಿ ಉಪಾಸನಾ ಪಂಜರಿಕೆ, ಲಕ್ಷ್ಮಿಯ ಪಾತ್ರದಲ್ಲಿ ಅಭಿಜ್ಞಾ ಬೊಳುಂಬು ಪ್ರದರ್ಶನದ ಆರಂಭದಲ್ಲೆ ಕಲಾಸಕ್ತರ ಗಮನ ಸೆಳೆದರು. ಗಂಭೀರ ಹಾಗೂ ದೃಢವಾದ ಹೆಜ್ಜೆಗಳೊಂದಿಗೆ ಕುಣಿಯುತ್ತಿದ್ದ ಸುದರ್ಶನ ಪಾತ್ರಧಾರಿ ಕಿಶನ್ ನೆಲ್ಲಿಕಟ್ಟೆಯ ಅಭಿನಯ ಚೆನ್ನಾಗಿ ಮೂಡಿ ಬಂತು. ದೇವೇಂದ್ರನಾಗಿ ಶ್ರೀಜಾ ಉದನೇಶ್, ರಾಕ್ಷಸಬಲನಾಗಿ ಪೂಜಾ ಉದನೇಶ್, ಶತ್ರುಪ್ರಸೂದನನಾಗಿ ನಂದಕಿಶೋರ ಅಭಿನಯಿಸಿದರು. ದೇವದೂತನಾಗಿ ಅಭಿನಯಿಸಿದ್ದ ಶಶಾಂಕ್ ಮೈರ್ಕಳ ಹಾಸ್ಯದ ಹೊನಲನ್ನು ಹರಿಸಿದರು. ಸುಮಾರು ಒಂದು ಗಂಟೆ ಕಾಲ ನಡೆದ ಈ ಕಥಾನಕವು ಕಲಾಸಕ್ತರಿಂದ ಅಭಿನಂದಿಸಲ್ಪಟ್ಟಿತು.
ಅನಂತರ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಹಿರಿಯ ಕಲಾವಿದರಿಂದ ನರಕಾಸುರ ಮೋಕ್ಷ ಪ್ರಸಂಗ ಪ್ರದರ್ಶಿಸಲ್ಪಟ್ಟಿತು. ಶ್ರೀಕೃಷ್ಣನಾಗಿ ವಿದ್ಯಾ ಕೆ. ಎಂ. ಸಾಕ್ಷಾತ್ ಕೃಷ್ಣನಂತೆಯೇ ಮೆರೆದಳು. ಸತ್ಯಭಾಮೆಯಾಗಿ ಶರಣ್ಯಾ, ರುಕ್ಮಿಣಿಯಾಗಿ ಸುಮಿತಾ ಅವರು ಭಾವಾಭಿನಯ ಹಾಗೂ ಮುಖಮುದ್ರೆಗಳನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು. ದೇವೇಂದ್ರನಾಗಿ ಶ್ರೀಹರಿ ಪಿ. ಮವ್ವಾರು, ಮುರಾಸುರನಾಗಿ ಪ್ರದೀಪ್ ಕೆದಿಲಾಯ ಪುಂಡೂರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನರಕಾಸುರ ಪಾತ್ರ ನಿರ್ವಹಿಸಿದ ಶ್ರೀಶಕುಮಾರ ಪಂಜಿತ್ತಡ್ಕ ಅವರು ಪಾತ್ರ ಸಹಜವಾದ ಗಂಭೀರತೆ, ವೀರಾವೇಷ, ಧ್ವನಿ ಸಹಿತ ಗಮನ ಸೆಳೆದರು. ದೂತನಾಗಿ ಶ್ರೀಹರಿ ಮವ್ವಾರು ಉತ್ತಮ ಪ್ರದರ್ಶನ ನೀಡಿದ್ದಾರೆ.
ಹಿಮ್ಮೇಳದಲ್ಲಿ ಭಾಗವತರಾಗಿ ಪ್ರದೀಪ್ ಕುಮಾರ್ ಕಂಬಳಪದವು, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಮದ್ದಳೆಯಲ್ಲಿ ಬಾಲಕೃಷ್ಣ ಅಚೆಗೋಳಿ, ಶ್ರುತಿಯಲ್ಲಿ ಪ್ರಭಾವತಿ ಕೆದಿಲಾಯ ಪುಂಡೂರು ಸಹಕರಿಸಿದ್ದರು. ಒಟ್ಟು ಪ್ರದರ್ಶನವನ್ನು ಹಿರಿಯ ಯಕ್ಷಕಲಾ ಶಿಕ್ಷಕ ಬಾಯಾರು ಸೂರ್ಯನಾರಾಯಣ ಪದಕಣ್ಣಾಯ ನಿರ್ದೇಶಿಸಿದ್ದರು. ವರ್ಣಾಲಂಕಾರದಲ್ಲಿ ಕೇಶವ ಕಿನ್ಯ, ಮೋಹನ್ ಸಹಕರಿಸಿದ್ದರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಯಕ್ಷ ಪ್ರದರ್ಶನವನ್ನು ಸಾವಿರಾರು ಮಂದಿ ವೀಕ್ಷಿಸಿದರು.
ರಾಘವೇಶ್ವರ ಶ್ರೀಗಳು ಕಲಾವಿದರನ್ನು ಮಂತ್ರಾಕ್ಷತೆ ನೀಡಿ ಹರಸಿದರು.
ಕೃಪೆ :
udayavani.com
|
|
|